ದಾವಣಗೆರೆ: ನಗರದ ಹೊರವಲಯವಾದ ಹೊಸಕುಂದುವಾಡ ಗ್ರಾಮದಲ್ಲಿ ಒಂದೇ ದಿನ 8 ಮಂದಿ ಸಾವು ಕಂಡ ಅತೀ ವಿರಳ ಘಟನೆ ನಡೆದಿದೆ. ಆದರೆ, ಆ ಶವಗಳನ್ನು ಹೂಳಲು ಆ ಗ್ರಾಮದಲ್ಲಿ ಸ್ಮಶಾನವಿಲ್ಲವಾಗಿ ಸ್ಮಶಾನಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ಸಂಜೆಯಿಂದ ಗುರುವಾರ ಬೆಳಿಗ್ಗೆವರೆಗೂ ಹೊಸಕುಂದುವಾಡ ಗ್ರಾಮದಲ್ಲಿ ನವಜಾತ ಶಿಶು ಸೇರಿ 7 ಮಂದಿ ಸಾವು ಕಂಡಿದ್ದು, ವಯೋಸಹಜ ಹಾಗೂ ಅನಾರೋಗ್ಯದಿಂದಾಗಿ ಮೃತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಸಕುಂದುವಾಡ ಗ್ರಾಮದಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮಕ್ಕೆ ಪ್ರತ್ಯೇಕ ಸ್ಮಶಾನವಿಲ್ಲವೆಂದು ಸಾವಿನ ಸೂತಕದ ನಡುವೆಯೇ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ.
ʻಈ ಮೊದಲು ಹಳೆ ಕುಂದುವಾಡ ಗ್ರಾಮಕ್ಕೆ ಸೇರಿದ ಸ್ಮಶಾನದಲ್ಲೇ ನಮ್ಮೂರಿನ ಶವಗಳನ್ನು ಹೂಳುತಿದ್ದೇವು. ಈಗ ಆ ಗ್ರಾಮಸ್ಥರು ಅದಕ್ಕೆ ಅಕ್ಷೇಪಣೆ ಒಡ್ಡಿದ್ದಾರೆ. ನಮ್ಮೂರಿನಲ್ಲಿ ನೀರಾವರಿ ಇಲಾಖೆಗೆ ಸೇರಿದ 3 ಎಕರೆ ಸರ್ಕಾರಿ ಜಾಗವಿದೆ. ಆ ಜಾಗದಲ್ಲಿ ಸ್ಮಶಾನಕ್ಕೆ ಮಂಜೂರಾತಿ ಮಾಡಿಕೊಡಲು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದೇವೆ. ಅವರು ಮಾಡಿ ಕೊಟ್ಟಿರುವುದಿಲ್ಲʼ ಎಂದು ಆರೋಪಿಸಿದರು.
ಈ ಶವಗಳನ್ನು ಅದೇ ಜಾಗದಲ್ಲಿ ಹೂಳುವುದು ನಮಗೆ ಅನಿವಾರ್ಯವಾಗಿದೆ. ಸಂಬಂಧಿಸಿದ ತಹಶೀಲ್ದಾರರು ಹಾಗೂ ಜಿಲ್ಲಾಡಳಿತ ಅದೇ ಜಾಗವನ್ನು ನಮ್ಮೂರಿಗೆ ಸ್ಮಶಾನಕ್ಕೆಂದು ಮುಂಜೂರು ಮಾಡಿಕೋಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.