
ಉಚಿತ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರ
ಶಿವಮೊಗ್ಗ : ಮನುಷ್ಯನ ಇತ್ತೀಚಿನ ಒತ್ತಡದ ದಿನಗಳಲ್ಲಿ ಯೋಗ ಪ್ರಾಣಾಯಾಮ ಧ್ಯಾನದ ಮೂಲಕ ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಶ್ರೀ ಶಿವಗಂಗ ಯೋಗ ಕೇಂದ್ರ ಅಧ್ಯಕ್ಷರಾದ ರುದ್ರಗೌಡ.ಎಸ್ ಹೇಳಿದರು.
ಜೆಸಿಐ ಶಿವಮೊಗ್ಗ ವಿವೇಕ್ ಹಾಗೂ ಶಿವಗಂಗಾ ಯೋಗ ಕೇಂದ್ರದ ಸಹಯೋಗದಲ್ಲಿ ಎಲ್.ಬಿ.ಎಸ್ ಬಡಾವಣೆಯಲ್ಲಿರುವ ಸ್ವಾಮಿ ವಿವೇಕಾನಂದ ಪಾರ್ಕ್ನಲ್ಲಿನ ಶ್ರೀ ಶಿವಶಕ್ತಿ ಯೋಗ ಭವನದಲ್ಲಿ ಏ.24 ರಿಂದ ಹತ್ತು ದಿನಗಳ ಕಾಲ ಆಯೋಜಿಸಲಾಗಿದ್ದ ಉಚಿತ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಿಬಿರಗಳು ಸ್ವಸ್ಥ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಲಿವೆ. ಉಚಿತವಾಗಿ ನಡೆಯುತ್ತಿರುವ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೇಳಿಕೊಂಡರು.
ಈ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಥೈರಾಡ್, ಮೈಗ್ರೇನ್, ತಲೆನೋವು, ಮಂಡಿ ನೋವು, ಸೊಂಟ ನೋವು, ಬೆನ್ನು ನೋವು, ರಾತ್ರಿ ನಿದ್ದೆ ಬಾರದಿರುವುದು, ಮಾನಸಿಕ ಒತ್ತಡ ಹಾಗೂ ಇನ್ನೂ ಅನೇಕ ಸಮಸ್ಯೆಗಳ ನಿವಾರಣೆಗಾಗಿ ಹಾಗೂ ಅವುಗಳು ಬಾರದಂತೆ ತಡೆಗಟ್ಟಲು ಈ ಯೋಗ ಶಿಬಿರ ಸಹಕಾರಿಯಾಗಲಿದೆ. ಎಲ್ಲರೂ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದರು.
ಮಾಜಿ ನಗರಸಭಾ ಸದಸ್ಯ ಈ.ವಿಶ್ವಾಸ್ ಮಾತನಾಡಿ, ಈ ಒಂದು ಪಾರ್ಕ್ನಲ್ಲಿ ಯೋಗಭವನವನ್ನು ನಿರ್ಮಿಸಿದ್ದು ಸಾರ್ಥಕವಾಯಿತು. ವಿವೇಕ್ ಜೆಸಿಐ ಸಂಸ್ಥೆಯವರು ನಿರ್ವಹಿಸಿಕೊಂಡು ಬರುತ್ತಿರುವ ಈ ಸ್ವಾಮಿ ವಿವೇಕಾನಂದ ಪಾರ್ಕ್ ಹಾಗೂ ಯೋಗಭವನ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿನಂದಿಸಿದರು.
ಯೋಗಾಚಾರ್ಯ ಶ್ರೀ ರುದ್ರಾರಾಧ್ಯ, ಶಿವಗಂಗಾ ಯೋಗ ಕೇಂದ್ರದ ಗುರುಗಳು –
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಾವು ಸೇವಿಸುವ ಆಹಾರ ಮತ್ತು ಜೀವನಶೈಲಿ ನಮ್ಮನ್ನು ಸದೃಢರಾಗಿಸುವಲ್ಲಿ ಸಹಕಾರಿಯಾಗಿದೆ. ಪ್ರತಿನಿತ್ಯ ನೀವು ನಿಮ್ಮ ಮನೆಯಲ್ಲಿರುವ ಮಕ್ಕಳನ್ನು ಸಹ ಶಿಬಿರಕ್ಕೆ ಕರೆದುಕೊಂಡು ಬನ್ನಿ. ಯುವಕರು ಆರೋಗ್ಯವಂತರಾಗಿದ್ದರೆ ಮಾತ್ರ ದೇಶ ಅಭಿವೃದ್ಧಿ ಆಗಲು ಸಾಧ್ಯ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ್ ಜೆಸಿಐ ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಕೇಶವ ವಹಿಸಿದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ, ರಂಗಪ್ಪ, ಪಂಚಾಕ್ಷರಪ್ಪ, ಜೆ.ಸಿ.ಬಾಲರಾಜ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಯೋಗ ಶಿಕ್ಷಕರಾದ ನೀಲಕಂಠ ರಾವ್, ನಾಗರತ್ನಮ್ಮ ಚಂದ್ರಶೇಖರಯ್ಯ ಹಾಗೂ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ನಾಗರಾಜ್ ಪರಿಸರ ಸ್ವಾಗತಿಸಿ, ಭಾರತಿ ವಂದಿಸಿ, ಜಗದೀಶ್ ನಿರೂಪಿಸಿದರು.