
ಕಾಶ್ಮೀರ ದಲ್ಲಿ ನಡೆದ ಭಯೋತ್ಪಾದಕರ ಧಾಳಿಯಲ್ಲಿ ಜೀವ ಕಳೆದಕೊಂಡ ಮೂವರು ಕನ್ನಡಿಗರ ಕುಟುಂಬಕ್ಕೆ ತಲಾ ರೂ.50 ಲಕ್ಷ ಪರಿಹಾರವನ್ನು ರಾಜ್ಯಸರ್ಕಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮಾಜಿ ಶಾಸಕರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಅದ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಪಾಕಿಸ್ತಾನಿ ಉಗ್ರರು ದೇಶದೊಳಗೆ ನುಗ್ಗಿಬಂದು ಕ್ರೂರವಾಗಿ ಪ್ರವಾಸಿಗರನ್ನು ಕೊಂದಿದ್ದಾರೆ. ಹೀಗೆ ಹತ್ಯೆಯಾದವರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದವರೇ ಗುರಿಯಾಗಿದ್ದು ಇದರಿಂದ ಕುಟುಂಬಗಳವರು ಅನಾಥವಾಗಿದ್ದಾರೆ. ಹೀಗಿರುವಾಗ ರಾಜ್ಯಸರ್ಕಾರ ಕೇವಲ ರೂ.10 ಲಕ್ಷ ಪರಿಹಾರ ಘೋಷಿಸಿರುವುದು ನ್ಯಾಯವಾದ ಪರಿಹಾರವಲ್ಲ. ಈ ಹಿಂದೆ ಕೇರಳದ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಆನೆ ತುಳಿತದಿಂದ ಸಾವಿಗೀಡಾದಾಗ ರಾಜ್ಯ ಸರ್ಕಾರ ರೂ.25 ಲಕ್ಷ ಪರಿಹಾರ ನೀಡಲಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸ ಬಯಸುತ್ತೇನೆ. ಆದ್ದರಿಂದ ಕೂಡಲೇ ಸಿದ್ದರಾಮಯ್ಯ ನವರು ಉಗ್ರರ ಅಟ್ಟಹಾಸದಿಂದ ಅನಾಥರಾಗಿರುವ ಕುಟುಂಬಗಳಿಗೆ ತಲಾ ರೂ.50 ಲಕ್ಷ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.