ಬೆಂಗಳೂರು : ಜಿಲ್ಲೆಯಲ್ಲಿನ ಅರಣ್ಯ ಭೂಮಿ ಒತ್ತುವರಿ, ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ರೈತರ ಅನೇಕ ಸಮಸ್ಯೆಗಳ ಕುರಿತು ಮಂಗಳವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಮಹತ್ವದ ಸಭೆ ನಡೆಸಿದರು.
ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲ್ಲೂಕುಗಳ ಅರಣ್ಯ ಭೂಮಿ ಒತ್ತುವರಿ, ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ರೈತರ ಅನೇಕ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.
ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಪ್ರತಿನಿಧಿಗಳನ್ನುದ್ದೇಶಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕಳೆದ ಐದು ದಶಕಗಳ ಸಮಸ್ಯೆ ಇದಾಗಿದ್ದು, ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಆಶ್ವಾಸನೆಯಂತೆ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದು ನಮ್ಮ ಕರ್ಯವ್ಯವಾಗಿದೆ ಎಂದರು.
ಅರಣ್ಯ ಭೂಮಿ ಸಾಗುವಳಿದಾರರನ್ನು ತೆರವುಗೊಳಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚಿಸಿದ್ದು, ಸುಪ್ರೀಂ ಕೋರ್ಟಿನಲ್ಲಿ ಐ.ಎ ಸಲ್ಲಿಸಲಾಗಿದೆ. 15 ದಿನಗಳಲ್ಲಿ ಜಿಲ್ಲೆಯ ಬಗರ್ ಹುಕುಂ ಹಾಗೂ ಶರಾವತಿ ರೈತ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಜನತೆಯ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಅರಣ್ಯ ಸಚಿವರಿಗೆ ಧನ್ಯವಾದಗಳು ಸಲ್ಲಿಸಿ , ಜಿಲ್ಲೆಯ ರೈತರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕಾನೂನು ತಿದ್ದುಪಡಿ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಹೋರಾಟ ಸಮಿತಿಯ ಮುಖಂಡರಾದ ಬಿಎ ರಮೇಶ್ ಹೆಗಡೆ, ಜಿ. ಡಿ. ಮಂಜುನಾಥ್, ನಗರದ ಮಹದೇವಪ್ಪ, ಎಂ. ಪಿ. ಧರ್ಮರಾಜ್, ಗಣಪತಿ ಹುಲ್ತಿಕೊಪ್ಪ, ಶ್ರೀನಿವಾಸ್ ಸಿಗಂದೂರ್ ರವಿ, ಕೆರೆಹಳ್ಳಿ ರಾಮಪ್ಪ, ಶ್ರೀನಿವಾಸ್ ಕರಿಯಣ್ಣ, ಸಂತೆಕಡೂರ್ ವಿಜಯಕುಮಾರ್, ಶಾಂತವೀರನಾಯ್ಕ್ , ರಾಘವೇಂದ್ರ ರಾಜಪ್ಪ, ಕಟ್ಟಿಗೆಹಳ್ಳಿ ರಘುಪತಿ ಸೇರಿದಂತೆ ಮತ್ತಿತರರು ಹಾಜರಿದ್ದರು.