
ಶಿವಮೊಗ್ಗ: ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳನ್ನು ತಪಾಸಣೆ ಮಾಡುವ ನೆಪದಲ್ಲಿ ಅವರ ಜನಿವಾರಕ್ಕೆ ಕೈ ಹಾಕುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು ಅದರ ಕುರಿತು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಎಸ್.ಕೆ.ನಟರಾಜ ಭಾಗ್ವತ್ ಸರ್ಕಾರವನ್ನು ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ತಿಲಕನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಹಮ್ಮಿಕೊಂಡ ಮೌನ ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕೈ ಹಾಕಿದ ಘಟನೆ ಕೇವಲ ಶಿವಮೊಗ್ಗದಲ್ಲಷ್ಟೇ ಅಲ್ಲ. ಸಾಗರ, ಧಾರವಾಡ, ಬೀದರ್, ಬೆಂಗಳೂರು ಹಾಗೂ ಇನ್ನಿತರ ಕಡೆ ಜರುಗಿದೆ. ಎಷ್ಟೋ ವಿದ್ಯಾರ್ಥಿಗಳು ಹೆದರಿಕೊಂಡು ವಿಷಯವನ್ನು ಹೊರಗೆಡವಲಿಲ್ಲ. ದಯಮಾಡಿ ಪಾಲಕ-ಪೋಷಕರು ತಮ್ಮ ಮಕ್ಕಳಿಗಾದ ಅನ್ಯಾಯವನ್ನು ಜನತೆಗೆ ತಿಳಿಸಬೇಕು ಎಂದು ಕೋರಿದರು.
ಜಾತಿ ಗಣತಿ ಮುನ್ನೆಲೆಗೆ ಬಂದ ತಕ್ಷಣ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸುವ ಪರಿಪಾಠ ಆರಂಭವಾಗಿದೆ. ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಪ.ಪೂ.ಸತ್ಯಾತ್ಮ ತೀರ್ಥರ ಸಂದೇಶದ ಪ್ರಕಾರ ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯ ಇವತ್ತು ಪ್ರತಿಭಟನೆಗೆ ಮುಂದಾಗಿದೆ ಎಂದರು.
ಬ್ರಾಹ್ಮಣರಿಗೆ ನೌಕರಿಯಲ್ಲಿ ಯಾವುದೇ ಮೀಸಲಾತಿ ಇಲ್ಲ. ಕೇವಲ ಮೆರಿಟ್ ಆಧಾರದ ಮೇಲೆಯೇ ನೌಕರಿ ಗಿಟ್ಟಿಸಿಕೊಳ್ಳಬೇಕು. 15-20 ನಿಮಿಷ ಪರೀಕ್ಷಾ ಕೊಠಡಿ ಹೊರಗೆ ವಿದ್ಯರ್ಥಿಗಳಿಗೆ ಮಾನಸಿಕ ಹಿಂಸೆ ಕೊಟ್ಟು ಅವರು ಪರೀಕ್ಷೆಯನ್ನು ಸರಿಯಾಗಿ ಬರೆಯಬಾರದು ಎಂಬ ಹುನ್ನಾರ ಜನಿವಾರಕ್ಕೆ ಕೈ ಹಾಕುವುದರ ಹಿಂದಿದೆ ಎಂದು ಆಪಾದಿಸಿದರು.
ತೀರ್ಥಹಳ್ಳಿಯ ಬಾಳಗಾರು ಜಯತೀರ್ಥಾಚಾರ್ ಮಾತನಾಡಿ ಜನಿವಾರ ತುಂಡು ಮಾಡಿದ್ದು ವಿಪ್ರರ ಪಾವಿತ್ರ್ಯತೆಗೆ ಧಕ್ಕೆ ಮಾಡಲಾಗಿದೆ. ಎಲ್ಲ ದೇವರ ಸಾನ್ನಿಧ್ಯ ಜನಿವಾರದಲ್ಲಿರುತ್ತದೆ. ಜನಿವಾರ ತುಂಡು ಮಾಡಿದ್ದರಿಂದ ದೇವರನ್ನೇ ತುಂಡು ಮಾಡಿದ ಹಾಗೆ ಎಂದ ಅವರು ಹಣ್ಣಿಗೆ ಮಾಂಗಲ್ಯ ಹೇಗೆ ಪವಿತ್ರವೋ ಹಾಗೆ ಜನಿವಾರ ಬ್ರಾಹ್ಮಣರಿಗೆ. ಆನಿವಾರ ತುಂಡು ಮಾಡಿದ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ಖ್ಯಾತ ವಕೀಲ ಅಶೋಕ್ ಜಿ.ಭಟ್ ಮಾತನಾಡಿ, ಜನಿವಾರ ತುಂಡರಿಸಿದ್ದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಇದು ಸಂವಿಧಾನದ ಮೂಲಭೂತ ಹಕ್ಕಿಗೆ ಚ್ಯುತಿ ತಂದಿದೆ. ಶಾಸಕರು ವಿಧಾನಮಂಡಲದ ಅಧಿವೇಶನದಲ್ಲಿ ಇದರ ಪ್ರಸ್ತಾಪ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ,
ಬ್ರಾಹ್ಮಣ ಸಮಾಜ ಅನಾದಿ ಕಾಲದಿಂದಲೂ ಹಿಂದೂ ಸಮಾಜಕ್ಕೆ ಶಕ್ತಿ ತುಂಬುತ್ತಿದ್ದಲ್ಲದೆ, ಮಾರ್ಗದರ್ಶನವನ್ನೂ ಮಾಡುತ್ತ ಬಂದಿದೆ. ಬ್ರಾಹ್ಮಣರು ದೇಶದ ಆಸ್ತಿ. ಕೌಟಿಲ್ಯ ತನ್ನ ಅರ್ಥಶಾಸ್ತ್ರದ ಮೂಲಕ ಇಡೀ ಪ್ರಪಂಚಕ್ಕೆ ಕೊಡುಗೆ ನೀಡಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ. ಜನಿವಾರ ಕತ್ತರಿಸಿರುವುದು ಒಂದು ದುಷ್ಕøತ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಿವಾರ ತುಂಡರಿಸಿದ ಹೊಣೆ ಹರಬೇಕು. ಇಡೀ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್,
ಇಂದು ನಾವು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ನಮಗೆ ಉಗ್ರ ಸ್ವರೂಪ ತೋರಿಸಲು ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಎಸ್.ರಘುರಾಮ್, ಮುಖಂಡರಾದ ಕುಷ್ಟಗಿ ವಾಸುದೇವಾಚಾರ್ಯ, ಎಂ.ಶಂಕರ್, ವೆಂಕಟೇಶ್ ರಾವ್, ಎಸ್.ದತ್ತಾತ್ರಿ, ಸುರೇಖಾ ಮುರಳೀಧರ್, ಡಾ.ಕೆ.ಎಸ್.ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.