
ಶಿವಮೊಗ್ಗ : ಬಂಟರ ಯಾನೆ ನಾಡವರ ಸಂಘ, ಯಕ್ಷಾಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಏ.24ರಂದು ಸಂಜೆ 6ಕ್ಕೆ ಶ್ರೀಸಾಲಿಗ್ರಾಮ ಮೇಳದವರಿಂದ “ಶುಭಲಕ್ಷಣ” ಎಂಬ ಸಾಮಾಜಿಕ ಯಕ್ಷಗಾನ ಪ್ರಸಂಗವನ್ನು ಗೋಪಾಳದ 100 ಅಡಿ ರಸ್ತೆಯಲ್ಲಿರುವ ಬಂಟರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶುಭಲಕ್ಷಣ ಎಂಬ ಯಕ್ಷಗಾನವು ಸಾಮಾಜಿಕವಾಗಿದ್ದು, ತೆಳು ಹಾಸ್ಯ, ಪ್ರೇಮ ಮತ್ತು ಸಾಮಾಜಿಕ ಅಂಶಗಳಿಂದ ಕೂಡಿದೆ. ಕಾಲ ಮಿತಿ ಯಕ್ಷಗಾನವಿದು ಸಂಜೆ 6ರಿಂದ ಪ್ರಾರಂಭವಾದರೆ ರಾತ್ರಿ 12.30ರವರೆಗೆ ನಡೆಯಬಹುದು. ಯಕ್ಷಗಾನ ಪ್ರಿಯರು ಇಂತಹ ಒಂದು ಸದಾವಕಾಶವನ್ನು ಕಳೆದುಕೊಳ್ಳಬಾರದು. ಪ್ರವೇಶ ಉಚಿತವಾಗಿರುತ್ತದೆ. ಅಷ್ಟೇ ಅಲ್ಲ ಯಕ್ಷಗಾನ ನೋಡಲು ಬಂದವರಿಗೆ ಲಘು ಉಪಹಾರ ವ್ಯವಸ್ಥೆ ಕೂಡ ಇರುತ್ತದೆ ಎಂದರು.
ಶುಭಲಕ್ಷಣ ಯಕ್ಷಗಾನವನ್ನು ಭಾರತದಲ್ಲಿಯೇ ಪ್ರಸಿದ್ಧಿಯಾದ ಶ್ರೀಸಾಲಿಗ್ರಾಮ ಮೇಳದವರು ನಡೆಸಿಕೊಡಲಿದ್ದಾರೆ. ಈ ಯಕ್ಷಗಾನ ಪ್ರಸಂಗವು ದೇವದಾಸ್ ಈಶ್ವರಮಂಗಲ ಅವರ ಕೃತಿಯಾಗಿದೆ. ಭಾಗವತ್ರಾಗಿ ಚಂದ್ರಕಾಂತಾ ರಾವ್ ಮೂಡಬೆಳ್ಳೆ, ಸೃಜನ್ ಗಣೇಶ್ ಹೆಗ್ಡೆ, ಶರತ್ಕುಮಾರ್ ಅವರು ಭಾಗವಹಿಸುತ್ತಾರೆ. ಸ್ತ್ರಿ-ಪುರುಷ ಹಾಗೂ ಹಾಸ್ಯಗಾರ ಪಾತ್ರಗಳಲ್ಲಿ ವಿಶೇಷ ಕಲಾವಿದರುಗಳು ಭಾಗವಹಿಸಲಿದ್ದು, ಇದೊಂದು ಅಪೂರ್ವ ಪ್ರಸಂಗವಾಗಿದೆ. ಯಕ್ಷಗಾನ ಪ್ರಿಯರು, ಸಾರ್ವಜನಿಕರು, ಯಕ್ಷಗಾನಕ್ಕೆ ಆಗಮಿಸಬೇಕು ಎಂದು ಸಂಘದ ರಾಜು ಶೆಟ್ಟರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ನಟ ಡಾ.ಕೆ.ಜಿ.ವೆಂಕಟೇಶ್, ಆನಂದ ಶೆಟ್ಟಿ ಇದ್ದರು.