ದಾವಣಗೆರೆ: ಜೂ.12ರಂದು ಕುವೈತ್ ನಗರದ ದಕ್ಷಿಣ ಭಾಗದಲ್ಲಿರುವ ಮಂಗಾಫ್ ಪ್ರದೇಶದ ಆರನೇ ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 42 ಭಾರತೀಯ ವಲಸೆ ನಿರ್ಮಾಣ ಕಾರ್ಮಿಕರ ದುರಂತ ಸಾವಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಸೆಂಟರ್ ಫಾರ್ ಟ್ರೆಡ್ ಯುನಿಯನ್ (ಸಿಐಟಿಯು) ತೀವ್ರ ಸಂತಾಪ ಸೂಚಿಸುತ್ತವೆ ಎಂದು ಆನಂದ್ ರಾಜ್ ಕೆ.ಹೆಚ್. ತಿಳಿಸಿದ್ದಾರೆ.
ಮೃತ ಕಾರ್ಮಿಕರು ನಿರ್ಮಾಣ ಸಂಸ್ಥೆಯಾದ ಎನ್ಬಿಟಿಸಿ ಗ್ರೂಪ್ನಿಂದ ಕೆಲಸಕ್ಕೆ ತೊಡಗಿಸಿಕೊಂಡಿದ್ದರು. ಅದು ತನ್ನ ಉದ್ಯೋಗಿಗಳಿಗೆ ಕಟ್ಟಡವನ್ನು ಬಾಡಿಗೆಗೆ ನೀಡಿತ್ತು. ಹೆಚ್ಚಿನ ಸಾವುಗಳು ಹೊಗೆ ಸೇವನೆಯಿಂದ ಸಂಭವಿಸಿವೆ. ಹತ್ತಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಅವರು ಹೇಳಿದ್ದಾರೆ.
ಈ ಆಘಾತಕಾರಿ ಘಟನೆ ಮತ್ತೊಮ್ಮೆ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಭಾರತೀಯ ವಲಸೆ ಕಾರ್ಮಿಕರ ಅಭದ್ರತೆಯ ಜೀವನ ಮತ್ತು ಅಪಾಯಕಾರಿ ಕೆಲಸದ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಲ್ಲಿನ ಮಾಲೀಕರು ಅನುಸರಿಸುವ ‘ಕಫಾಲಾ’ ಎಂಬ ಶೋಷಕ ವ್ಯವಸ್ಥೆ ನೌಕರ -ಕಾರ್ಮಿಕರಿಗೆ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ದೂರಿದ್ದಾರೆ.
ಭಾರತೀಯ ವಲಸೆ ಕಾರ್ಮಿಕರ ಮತ್ತು ಅವರ ಕುಟುಂಬಗಳ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಲು ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.