ಬೆಂಗಳೂರು: ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ ತನ್ನ ಖಾಸಗಿ ಕ್ಷಣಗಳಿಗೆ ಮೂರು ವರ್ಷದ ಮಗು ಅಡ್ಡಿ ಪಡಿಸುತ್ತಿದೆ ಎಂದು ಹತ್ಯೆ ಮಾಡಿದ್ದಾನೆ. ತನ್ನ ಮಗನನ್ನು ಕೊಲೆ ಮಾಡಿದ್ದಕ್ಕೆ ಮಗುವಿನ ತಾಯಿ ಪೊಲೀಸ್ ದೂರು ನೀಡಿದ್ದಾಳೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಶ್ವಿನ್ ಸಾವನ್ನಪ್ಪಿರುವ ನತದೃಷ್ಟ ಬಾಲಕನಾಗಿದ್ದಾನೆ. ಮೃತ ಅಶ್ವಿನ್ ತಾಯಿ ರಮ್ಯಾಳ ಪ್ರಿಯಕರ ಮೈಕೆಲ್ ರಾಜ್(30) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಬೊಮ್ಮನಹಳ್ಳಿಯ ವಿರಾಟ್ ನಗರದ ನಿವಾಸಿಯಾಗಿರುವ ಮೈಕೆಲ್ ರಾಜ್ ಇಲ್ಲೊಂದು ಗ್ಯಾರೇಜ್ ಅಂಗಡಿಯನ್ನು ಹೊಂದಿದ್ದಾನೆ.
ರಮ್ಯಾ ಅವರು ಹೊಂದಾಣಿಕೆ ಸಮಸ್ಯೆಯಿಂದ ಪತಿಯಿಂದ ದೂರವಾಗಿದ್ದರು. ಬಾಡಿಗೆ ಮನೆಗೆ ಬಂದ ಸಂದರ್ಭದಲ್ಲಿ ಮೈಕೆಲ್ ರಾಜ್ ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.
ಕಳೆದ ಆರೇಳು ತಿಂಗಳಿಂದ ಇವರ ಪ್ರೇಮ ಸಂಬಂಧ ಮುಂದುವರಿದಿತ್ತು. ಜುಲೈ 6 ರಂದು ಸಂಜೆ ರಮ್ಯಾ ಲೈಟ್ ಬಲ್ಬ್ ಖರೀದಿಸಲು ಹೊರಗೆ ಹೋಗಿ ಬಂದಾಗ ಅಶ್ವಿನ್ ಮುಖದ ಮೇಲೆ ಗಾಯಗಳು ಕಂಡುಬಂದಿವೆ. ಆರೋಪಿ ಮೈಕೆಲ್ ರಾಜ್ ಮಗುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆ ರಾತ್ರಿ, ಅಶ್ವಿನ್ ಸ್ನಾನಗೃಹವನ್ನು ಬಳಸಲು ಎಚ್ಚರಗೊಂಡು ನೆಲದ ಮೇಲೆ ಉಳಿದಿದ್ದ ಜೋಳವನ್ನು ತಿಂದಿದ್ದಾನೆ. ಇದರಿಂದ ಕೋಪಗೊಂಡ ಮೈಕೆಲ್ ರಾಜ್ ಮಗುವಿಗೆ ಮತ್ತೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವರದಿಯಾಗಿದೆ.
ಸ್ವಲ್ಪ ಸಮಯದ ನಂತರ ಬಾಲಕನಿಗೆ ಅಪಸ್ಮಾರ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ರಮ್ಯಾ ಮತ್ತು ಮೈಕೆಲ್ ರಾಜ್ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜುಲೈ 7 ರಂದು ನಿಮ್ಹಾನ್ಸ್ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಜುಲೈ 8 ರಂದು ಮಗು ಮೃತಪಟ್ಟಿದ್ದಾನೆ. ಮೈಕೆಲ್ ರಾಜ್ ಮಗುವಿನ ತಲೆಯನ್ನು ಗೋಡೆಗೆ ಹೊಡೆದಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಮೈಕೆಲ್ ರಾಜ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.