ಶಿವಮೊಗ್ಗ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನೇತೃತ್ವದಲ್ಲಿ ಒಕ್ಕಲಿಗರ ಸಮುದಾಯದ ಹದಿಮೂರು ಸಂಘಟನೆಗಳ ಸಹಯೋಗದಲ್ಲಿ ಜೂನ್ 27 ರಂದು ಗುರುವಾರ ನಗರದ ಶರಾವತಿ ನಗರ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ವಿವರಿಸಿದರು.
ಅಂದು ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಎಂ.ಆರ್.ಎಸ್. ವೃತ್ತ, ಗಾಡಿಕೊಪ್ಪ, ಜಿಲ್ಲಾ ಒಕ್ಕಲಿಗರ ಸಂಘದಿಂದ ಹೊರಡುವ ಕಾರು ಬೈಕ್ ರ್ಯಾಲಿಯು ಮಹಾವೀರ ವೃತ್ತದ ಮೂಲಕ ಶಿವಪ್ಪನಾಯಕ ವೃತ್ತ ಬಂದು ಸೇರಲಿದೆ. ಅಲ್ಲಿಂದ ಒಟ್ಟಾಗಿ ಶ್ರೀ ಆದಿಚುಂಚನಗಿರಿ ಸಮುದಾಯ ಭವನ ತಲುಪುವಂತೆ ಹಾಗೂ ಕುವೆಂಪು ರಸ್ತೆಯಿಂದ ಪೂರ್ಣಕುಂಭ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬೆಳಿಗ್ಗೆ 11:00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು, ನಿಗಮ ಮಂಡಳಿ ಅಧ್ಯಕ್ಷರು, ಸಮುದಾಯದ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಿರಿಯ ಇತಿಹಾಸ ತಜ್ಞರಾದ ಪ್ರೊ. ತಿಮ್ಮಯ್ಯ ನಾಯ್ಡು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕುವೆಂಪು ವಿ.ವಿ. ಪದವಿ, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ, ಕೃಷಿ, ಗುಡಿ ಗೃಹ ಕೈಗಾರಿಕೆ, ರಾಷ್ಟ್ರಮಟ್ಟದ ಕ್ರೀಡಾ ಪ್ರತಿಭೆಗಳು, ಸಾಹಿತ್ಯ, ಶೈಕ್ಷಣಿಕ, ವಿಕಲ ಚೇತನ, ಸಿನಿಮಾ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಕ್ಕಲಿಗರ ಸಮುದಾಯದ ಮಾಹಿತಿಯಿರುವ ತಾಯಿಮನೆ ಸುದರ್ಶನ ಅವರ ತಂಡ ನಿರ್ಮಾಣ ಮಾಡಿರುವ ವೆಬ್ ಸೈಟ್ ಬಿಡುಗಡೆ ಮಾಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಎಚ್.ಬಿ. ಆದಿಮೂರ್ತಿ, ಡಾ. ಶಾಂತಾ ಸುರೇಂದ್ರ, ಟಿ. ಪಿ. ನಾಗರಾಜ್, ಗೋ. ರಮೇಶ್ ಗೌಡ, ಪ್ರತಿಮಾ ಡಾಕಪ್ಪಗೌಡ, ಶಂಕರ್, ರಘುರಾಜ್, ಭಾರತಿ ರಾಮಕೃಷ್ಣ, ಸುಮಿತ್ರಾ ಕೇಶವಮೂರ್ತಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಗಾಡಿಕೊಪ್ಪ ಎಂ. ರಾಜಣ್ಣ ಉಪಸ್ಥಿತರಿದ್ದರು.