ಶಿವಮೊಗ್ಗ,ಜೂ.೨೬: ಭಗವಂತನನ್ನು ಶ್ರದ್ಧೆಯಿಂದ ಆರಾಧಿಸಿದರೆ ಮಾತ್ರ ಸಾಕ್ಷತ್ಕಾರ ಸಾಧ್ಯ ಎಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.
ಅವರು ಇಲ್ಲಿಯ ಶ್ರೀಶಂಕರ ಮಠ ಹಾಗೂ ಶ್ರೀಶಂಕರ ತತ್ವ ಪ್ರಸಾರ ಸಮ್ಮಿತಿಗಳು ಜಂಟಿಯಾಗಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಗವಂತನನ್ನು ಆಶ್ರಯಿಸಿದ ಭಕ್ತರಿಗೆ ಅನುಗ್ರಹ ದೊರೆಯುತ್ತದೆ. ಭಗವಂತನ ನಾಮ ಸಂಕೀರ್ತನದಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಮನುಷ್ಯ ಜೀವನ ಬೇಡದೆ ಹೋದ ಮಾತುಗಳ ಜಾಗದಲ್ಲಿ ಭಗವಂತನ ನಾಮ ಸ್ಮರಣೆ ಮಾಡಿದರೆ ಜೀವನ ಸಾಫಲ್ಯವಾಗುತ್ತದೆ ಎಂದು ಹೇಳಿದರು.
ಮನುಷ್ಯ ಯಾವಾಗಲೂ ತತ್ಸಂಗದಲ್ಲಿರಬೇಕು. ಸತ್ಪುರುಷರ ಸಹವಾಸದಲ್ಲಿರಬೇಕು. ಅಂದಾಗ ಅವರ ಗುಣಗಳು ಇವರಲ್ಲಿ ಬರುತ್ತದೆ. ಆದ್ದರಿಂದ ಸತ್ಪುಷರಾಗಿ ಜೀವನ ಸಾಗಿಸಬೇಕು ಎಂದು ಕಿವಿ ಮಾತುಹೇಳಿದರು.
ಆದಿಶಂಕರ ಭಗವತ್ಪಾದಾಚಾರ್ಯರು ನೀಡಿದ ಉಪದೇಶಗಳನ್ನು ಅಳವಂಡಿಸಿಕೊಳ್ಳುವುದರಿಂದ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು ಎಂದು ತಿಳಿಸಿದ ಅವರು, ಮನುಷ್ಯ ನಿಷ್ಕಾಮವಾಗಿ ಪ್ರತಿನಿತ್ಯ ಭಗವಂತನ ಆರಾಧನೆ ಮಾಡಬೇಕು. ಪ್ರತಿಯೊಬ್ಬರು ಶ್ರೀಶಂಕರ ಸ್ತೂತ್ರಗಳನ್ನು ಪಠಿಸಬೇಕು. ಮಕ್ಕಳು ಚಿಕ್ಕವರಿದ್ದಾಗಲೇ ಅವರ ಜೀವನ ವಿಕಾಸಕ್ಕಾಗಿ ಆಧ್ಯಾತ್ಮ ವಿಚಾರವನ್ನು ಹೇಳಿಕೊಡಬೇಕು ಎಂದು ಸಲಹೆ ನೀಡಿದರು.
ಶ್ರೀಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜು ಭಾಗವತ್, ಪ್ರೊ.ವೆಂಕಟೇಶಮೂರ್ತಿ, ಶ್ರೀಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.