
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂ ನಲ್ಲಿ ಮೊನ್ನೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ತನ್ನ ಪ್ರಾಣ ತ್ಯಾಗ ಮಾಡಿದ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಅವರ ಪಾರ್ಥಿವ ಶರೀರ ಇಂದು ಅವರ ಸ್ವಗೃಹಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಮಂಜುನಾಥ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನಗರಕ್ಕೆ ಆಗಮಿಸಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಮಂಜುನಾಥ್ ಅವರ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಭಾರವಾದ ಮನಸ್ಸಿನಿಂದ ಅಂತಿಮ ನಮನ ಸಲ್ಲಿಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ –
ಈ ಭೀಕರ ಕೃತ್ಯ ಎಸಗಿದ ಭಯೋತ್ಪಾದಕರ ಎಡೆಮುರಿ ಕಟ್ಟಲು ಈಗಾಗಲೇ ಕೇಂದ್ರ ಸರ್ಕಾರ ಬಲಿಷ್ಠ ಸೈನಿಕರ ಪಡೆಯ ಮೂಲಕ ಕಾರ್ಯಚರಣೆ ನಡೆಸುತ್ತಿದೆ. ಇಂತಹ ಭಯೋತ್ಪಾದಕರನ್ನು ತನ್ನ ಒಡಲಲ್ಲಿ ಇಟ್ಟು ಸಾಕುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಮೋದಿ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಿದೆ. ಈ ಕಣ್ಣೀರಿಗೆ ಶೀಘ್ರವೇ ಶಾಶ್ವತ ನ್ಯಾಯ ಸಿಗುವ ಅಚಲ ವಿಶ್ವಾಸವಿದೆ. ಈ ದುರ್ಘಟನೆಯಿಂದ ಆಘಾತವಾಗಿರುವ ಕುಟುಂಬದೊಂದಿಗೆ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಾನು ಸದಾ ಜೊತೆಗಿರುತ್ತೇನೆ ಎಂದು ಧೈರ್ಯ ತುಂಬುತ್ತಾ, ಅಗಲಿದ ಅತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬ ವರ್ಗದವರಿಗೆ ಹಾಗೂ ಬಂಧುಗಳಿಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸುತ್ತೇನೆ.
ಸಚಿವ ಮಧು ಬಂಗಾರಪ್ಪ , ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಶಾಸಕ ಎಸ್ಎನ್ ಚನ್ನಬಸಪ್ಪ, ಡಾ.ಧನಂಜಯ್ ಸರ್ಜಿಯವರನ್ನು ಒಳಗೊಂಡು ಪಕ್ಷಾತೀತವಾಗಿ ಹಲವು ಮುಖಂಡರು ಅಂತಿಮ ದರ್ಶನ ಪಡೆದರು.
ಮನೆ ಮುಂಭಾಗ ಮಂಜುನಾಥ ರಾವ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬದವರು, ಆಪ್ತರು ಮತ್ತು ವಿವಿಐಪಿಗಳಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ, ಸಾರ್ವಜನಿಕರಿಗೆ ಪ್ರತ್ಯೇಕ ಕ್ಯೂ ಮಾಡಲಾಗಿತ್ತು. ಅವರ ಪಾರ್ಥೀವ ಶರೀರ ಇಂದು ಶಿವಮೊಗ್ಗಕ್ಕೆ ಬಂದಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ವಿಧಿವಿಧಾನಗಳ ಪ್ರಕ್ರಿಯೆ ನಡೆದು, ಅವರ ಅಂತಿಮಯಾತ್ರೆ ಹೊರಟಿದೆ.