ಶಿವಮೊಗ್ಗ: ಸಬ್ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸಬಾರದು ಈಗಿರುವ ಕಚೇರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಭಗತ್ಸಿಂಗ್ ಕನ್ನಡ ಯುವಕರ ಸಂಘದ ಅಧ್ಯಕ್ಷ ರಾಜಶೇಖರ್ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಾಲಿ ಇರುವ ಸಬ್ರಿಜಿಸ್ಟ್ರಾರ್ ಕಚೇರಿ ನಗರದ ಎಲ್ಲಾ ಭಾಗದ ಸಾರ್ವಜನಿಕರಿಗೆ ಅನುಕೂಲಕರವಾಗಿದ್ದು, ಸುಗಮವಾದ ರಸ್ತೆಯ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಇದೆ. ಲಿಪ್ಟ್ ವ್ಯವಸ್ಥೆ ಕೂಡ ಈ ಕಟ್ಟಡದಲ್ಲಿ ಕಲ್ಪಿಸಲಾಗಿದ್ದು, ವಯಸ್ಸಾದವರಿಗೆ ಹಾಗೂ ಅಂಗವಿಕಲರಿಗೆ ಅನುಕೂಲಕರವಾಗಿದೆ. ಶುದ್ಧ ಕುಡಿಯುವ ನೀರಿನ ಸೌಲಭ್ಯ, ಕುಳಿತುಕೊಳ್ಳಲು ಸ್ಥಳಾವಕಾಶ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಅವಕಶ್ಯಕತೆ ಇದ್ದು, ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರೆ ಹಾಲಿ ಇರುವ ಸಬ್ರಿಜಿಸ್ಟ್ರಾ ಕಚೇರಿಯು ಎಲ್ಲರಿಗು ಅನುಕೂಲವಾಗುತ್ತದೆ. ಮತ್ತು ಅದನ್ನೇ ನಂಬಿ ಹಲವಾರು ಬಡವರು ವ್ಯವಹಾರ ಮಾಡುತ್ತಿದ್ದು, ಏಕಾಏಕಿ ಕಚೇರಿಯನ್ನು ಸ್ಥಳಾಂತರ ಮಾಡಿದರೆ ಹಲವು ಕುಟುಂಬಗಳು ಬೀದಿಗೆ ಬೀಳುತ್ತವೆ.
ಪ್ರಾಸ್ತಾವಿತ ಎಪಿಎಂಸಿ ಯಾರ್ಡ್ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕಟ್ಟಡಕ್ಕೆ ಸಬ್ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಗೊಳಿಸಿದರೆ ಬೇರೆ ಬೇರೆ ಭಾಗಗಳಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಹಾಗೂ ಕಟ್ಟಡದ ಮುಂಭಾಗದಲ್ಲಿ ಮದ್ಯ ಮಾರಾಟದ ಅಂಗಡಿಗಳು ಇವೆ. ಮತ್ತು ಸಾಗರ ರಸ್ತೆಯಲ್ಲಿ ಅತಿಯಾದ ವಾಹನ ಸಂಚಾರ ದಟ್ಟಣೆ ಇರುವುದರಿಂದ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಅಪಘಾತದ ಸಂಭವ ಹೆಚ್ಚಾಗಿದ್ದು, ಹಾಲಿ ಸಬ್ರಿಜಿಸ್ಟ್ರಾರ್ ಕಚೇರಿ ಇರುವ ಜಾಗದಲ್ಲೇ ಮುಂದುವರೆಸಿಕೊಂಡು ಹೋಗಬೇಕೆಂದು ಸಂಘ ವಿನಂತಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಆರ್.ಕೆ.ದೇವದಾಸ್, ಸುಧಾಕರ್, ರಾಜಣ್ಣ, ಮಣಿ, ಶಿವಕುಮಾರ್, ಪ್ರಕಾಶ್, ಸೋಮಶೇಖರ್, ಶಂಕರ್, ಆರ್ಮುಗಂ, ಕಿರಣ್ ಆರ್., ಮೊದಲಾದವರು ಇದ್ದರು.