ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ವತಿಯಿಂದ ಅಗತ್ಯ ಸಾಮಗ್ರಿಗಳ ವಿತರಣೆ

ಶಿವಮೊಗ್ಗ : ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ. ಇಂತಹ ಪವಿತ್ರ ಸೇವೆ ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯ ಶ್ಲಾಘನೀಯ ಎಂದು ಇನ್ನರ್ ವೀಲ್ ಪೂರ್ವ ಶಿವಮೊಗ್ಗದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.
ನಗರದ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ವೃದ್ಧರಿಗೆ ಅನಾಥರಿಗೆ ಮಲಗಲು ಮಂಚಗಳು ಹಾಗೂ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ. ಇಂದು ನಮ್ಮ ನಮ್ಮ ಮನೆಗಳಲ್ಲಿ ತಂದೆ ತಾಯಿಯರನ್ನು , ಹಿರಿಯರನ್ನು ನೋಡಿಕೊಳ್ಳಲು ಹಿಂದೇಟು ಹಾಕುವ ಕಾಲದಲ್ಲಿ ಗುಡ್ ಲಕ್ ಆರೈಕೆ ಕೇಂದ್ರ ಬಹಳ ವರ್ಷಗಳಿಂದ ಮಾನಸಿಕ ಅಸ್ವಸ್ಥರನ್ನು ಹಾಗೂ ವೃದ್ಧರನ್ನು ಆರೈಕೆ ಮಾಡುತ್ತಿರುವುದು ನಿಜವಾದ ಮಾನವೀಯ ಮನುಕುಲದ ಸ್ಫೂರ್ತಿಯಾಗಿದೆ ಎಂದು ನುಡಿದರು.
ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ಯು.ರವೀಂದ್ರನಾಥ ಐತಾಳ್ ಮಾತನಾಡಿ, ಸರ್ಕಾರದ ಯಾವುದೇ ಅನುದಾನವಿಲ್ಲದೆ ನಡೆಸುತ್ತಿರುವ ಸಂಸ್ಥೆ ನಮ್ಮದು. ದಾನಿಗಳ, ಸಂಘ ಸಂಸ್ಥೆಗಳ ನೆರವಿನಿಂದ ಹಾಗೂ ಅನ್ನಪೂರ್ಣೇಶ್ವರಿ ನಿತ್ಯ ಪ್ರಸಾದ ಯೋಜನೆಯಿಂದ ನಮ್ಮ ಆರೈಕೆ ಕೇಂದ್ರ ಇವತ್ತಿಗೂ ಯಾವುದೇ ತೊಂದರೆ ಇಲ್ಲದ ಹಾಗೆ ನಡೆಯುತ್ತಿದೆ ಎಂದು ನುಡಿದರು.
ಗುಡ್ ಲಕ್ ಆರೈಕೆ ಕೇಂದ್ರದ ನಿರ್ದೇಶಕರಾದ ಜಿ.ವಿಜಯ್ ಕುಮಾರ್ ಮಾತನಾಡಿ, ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹಾಗೂ ಹಿರಿಯರ ನೆನಪಿನ ಕಾರ್ಯಕ್ರಮಗಳನ್ನು ಇಂತಹ ಸಂಸ್ಥೆಗಳಲ್ಲಿ ಹಮ್ಮಿಕೊಂಡರೆ ಆ ಕಾರ್ಯಕ್ರಮಗಳು ಸಾರ್ಥಕತೆಯ ಹೊಂದುತ್ತವೆ ಎಂದ ಅವರು, ಇನ್ನರ್ ವೀಲ್ ಸಂಸ್ಥೆಯ ಸೇವೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಮಂಚದ ದಾನಿಗಳಾದ ನಿರ್ಮಲ ಮಹೇಂದ್ರರವರಿಗೆ ಮತ್ತು ದಾನಿಗಳಿಗೆ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿದರು. ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ವಾಣಿ ಪ್ರವೀಣ್, ಕಾರ್ಯದರ್ಶಿ ಲತಾ ಸೋಮಣ್ಣ, ವಿಜಯ ರಾಯ್ಕರ ಸೇರಿದಂತೆ ಇನ್ನರ್ ವೀಲ್ ಸಂಸ್ಥೆಯ ಸಹೋದರಿಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.