![](https://www.nammanaadu.com/wp-content/uploads/2024/06/SANTHI-NIKETHANA-1024x683.jpg)
ಶಿವಮೊಗ್ಗ: ಚಿಕ್ಕಮಗಳೂರಿನಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ದೃಶ್ಯಕಲಾ ಪದವೀಯ ಪ್ರವೇಶ ಆರಂಭವಾಗಿದ್ದು, ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸಂಸ್ಥೆಯನ್ನು ಸಂಪರ್ಕಿಸಿ ಪ್ರವೇಶ ಪಡೆಯಬಹುದು ಎಂದು ಶಾಂತಿನಿಕೇತನ ಚಿತ್ರಕಲಾ ಮಹಾ ವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ತಿಳಿಸಿದರು.
ಬುಧವಾರ ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲವು ಕಳೆದ ೨೮ ವರ್ಷಗಳಿಂದ ಕಲೆ ಮತ್ತು ಸಂಸ್ಕೃತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ಶಿಕ್ಷಣ ರೂಪದಲ್ಲಿ ಪದವಿ ನೀಡುತ್ತಿದೆ. ಇಲ್ಲಿ ಪರವಿ ಪಡೆದ ನೂರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು, ಜೀವನ ರೂಪಿಸಿಕೊಂಡಿದ್ದಾರೆ. ಇದು ಈ ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಎಸ್ಎಸ್ಎಲ್ಸಿ ಪಾಸಾದ ನಂತರ ಪಿಯುಸಿ, ಐಟಿಐ, ಡಿಪ್ಲೋಮಾ ಪಾಸಾದ ಅಥವಾ ಪೇಲಾದ ವಿದ್ಯಾರ್ಥಿಗಳು ಸೃಜನಶೀಲವಾದ ಪ್ರಾಯೋಗಿಕ ಶಿಕ್ಷಣ ಆಯ್ಕೆ ಮಾಡಿದಲ್ಲಿ ಸ್ವಾವಲಂಬಿ ಬದುಕು, ನಿರಂತರ ಜೀವನೋತ್ಸಾಹದ ಶಿಕ್ಷಣ,ಅಂಕಗಳ ಪ್ರಾಧಾನ್ಯತೆಯಿಂದ ಹೊರತಾದ ಸಮಾಜದ ನಡುವೆ ವೈಯುಕ್ತಿಕವಾಗಿ ಸಾಧಿಸುವ, ಗುರುತಿಸಿಕೊಳ್ಳುವ ಸೃಜನಾತ್ಮಕ ಜೀವನಕಟ್ಟುವಲ್ಲಿ ದೇಶಾತೀತ, ಭಾಷಾತೀತ ಚಿತ್ರಕಲಾ ಶಿಕ್ಷಣ ಭರವಸೆ ಮೂಡಿಸಬಲ್ಲದು ಎಂದರು.
ಸಂಪ್ರಾದಾಯಿಕ ಶಿಕ್ಷಣವಾದ ಪದವಿ, ಇಂಜಿನಿಯರ್, ವೈದ್ಯಕೀಯ ಪದವಿಯಂತೆಯೇ ದೃಶ್ಯಕಲಾ ಪದವಿಯು ಕೂಡ ಇದಾಗಿದೆ. ಈ ದೃಶ್ಯಕಲಾ ಪದವಿ ಬಿ.ವಿ.ಎ. ಅನೌಪಚಾರೀಕ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ಪದವಿಯಲ್ಲಿ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ. ತನಕ ಶಿಕ್ಷಣ ಲಭ್ಯವಿದೆ ಎಂದರು.
ದೃಶ್ಯಕಲಾ ಪದವಿಯು ೪ ವರ್ಷದ್ದಾಗಿದ್ದು, ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಸಂಹಿತೆಯಲ್ಲಿ ಚಿತ್ರಕಲೆಯನ್ನು ಒಂದು ಅಧ್ಯಯನ ವಿಷಯವಾಗಿ ಪರಿಗಣಿಸಿ ಈ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದೆ ಎಂದ ಅವರು, ಈ ಪದವಿ ಪಡೆದವರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ೯೬೨೦೯೯೩೦೨೬, ೬೩೬೦೪೪೮೮೪೪, ೦೮೨೬೨೨೯೫೧೩೬ರಲ್ಲಿ ಸಂಪರ್ಕಿಸಬಹುದು. ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕಿ ಮಧುಶಿಲ್ಪ ಉಪಸ್ಥಿತರಿದ್ದರು.