ಶಿವಮೊಗ್ಗ : ಚಿತ್ರದುರ್ಗದ ವಾಸಿ ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ಅಮಾನುಷವಾಗಿ ಕೊಲೆಗೈದ ಆರೋಪಿಗಳಾದ ನಟ ದರ್ಶನ ಹಾಗೂ ಆತನ ಸಹಚರರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬುಧವಾರ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ವಿವಿಧ ಸಮಾಜ ಮತ್ತು ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದರ್ಶನ ಅಭಿಮಾನಿ ಬಳಗದ ಸದಸ್ಯ ರೇಣುಕಾ ಸ್ವಾಮಿಯವರನ್ನು ತನ್ನ 19 ಸಹಚರರ ಮೂಲಕ ಬೆಂಗಳೂರಿಗೆ ಕರೆಸಿ ಕ್ಷುಲಕ ಕಾರಣಕ್ಕೆ ಚಿತ್ರ ಹಿಂಸೆ ನೀಡಿ ನರಳಿ ಸಾಯುವಂತೆ ಅನೇಕ ಆಯುಧಗಳಿಂದ ರೇಣುಕಾಸ್ವಾಮಿ ದೇಹದ ಮಾರ್ಮಾಂಗ ಹಾಗೂ ಇತರೆ ಅಂಗಗಳು ಊನವಾಗುವಂತೆ ಹೊಡೆದು ಸಾಯಿಸಿರುವುದು ರಾಕ್ಷಸಿ ಪ್ರವೃತ್ತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಚಿತ್ರನಟರಾದವರು ಸಮಾಜಕ್ಕೆ ಮಾದರಿಯಾಗುವಂತೆ ಇರಬೇಕು ಆದರೆ ಇವರು ಉಗ್ರವಾದಿಗಳಿಗಿಂತ ಕೀಳಾಗಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಇಂತಹವರನ್ನು ಚಲನಚಿತ್ರ ರಂಗದಿಂದ ಅಮಾನತು ಮಾಡಬೇಕು ಮತ್ತು ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಎಲ್ಲರಿಗೂ ಘೋರ ಶಿಕ್ಷೆಯನ್ನು ವಿಧಿಸುವಂತೆ ಮತ್ತು ಮೃತನ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಬೇಕೆಂದು ನಿಮ್ಮ ಮೂಲಕ ಸರ್ಕಾರಕ್ಕೆ ಆಗ್ರಹಿಸುವುದಾಗಿ ಮನವಿಯಲ್ಲಿ ಹೇಳಿದ್ದಾರೆ.
ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಬಿಳಿಕಿ ಶ್ರೀಗಳು, ಅಯನೂರು ಮಂಜುನಾಥ್, ಎಸ್.ಪಿ.ದಿನೇಶ್, ಸೋಮನಾಥ್ ಕೆ.ಆರ್., ಸಂತೋಷ್ ಬಳ್ಖಕರೆ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.