ಪತ್ರಿಕಾಗೋಷ್ಟಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ. ಭರತ್.ಎಸ್.ವಿ ಮಾಹಿತಿ
ಶಿವಮೊಗ್ಗ : ಭಾರತೀಯ ದಂತ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದ ವತಿಯಿಂದ ನ.09 ಮತ್ತು ನ.10ರಂದು ಜೆಎನ್ಎನ್ಸಿಇ ಕ್ರೀಕೆಟ್ ಮೈದಾನದಲ್ಲಿ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ರಾಜ್ಯಮಟ್ಟದ ಕ್ರೀಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ. ಭರತ್ ಎಸ್.ವಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ಎರಡು ದಿನದ ಪಂದ್ಯಾವಳಿಯಾಗಿದ್ದು, ಮಹಿಳೆಯರಿಗೆ 6 ಓವರ್, ಪುರುಷರಿಗೆ 8 ಓವರ್ ಗಳನ್ನು ನಿಗಧಿಪಡಿಸಲಾಗಿದೆ. ಪಂದ್ಯಾವಳಿಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ 5 ಗಂಟೆಯವರೆಗೆ ನಡೆಯಲಿದೆ. ಗೆದ್ದ ತಂಡಕ್ಕೆ ಟ್ರೋಪಿಯನ್ನು ನೀಡಲಾಗುವುದು ಎಂದರು.
ನ. 9 ರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ಆಯೋಜಿಸಿದ್ದು, ಈ ಸಮಾರಂಭಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಡಿ.ಎಸ್.ಅರುಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಸಮಾರೋಪ ಸಮಾರಂಭ ನ.10 ರ ಸಂಜೆ 5.00 ಗಂಟೆಗೆ ನಡೆಯಲಿದ್ದು, ಈ ಸಮಾರಂಭದಲ್ಲಿ ಶಾಸಕರುಗಳಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪನವರು ಉದ್ಘಾಟನಾ ಸಮಾರಂಭ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ದಂತ ವೈದ್ಯರ ಸಂಘವು ಈಗಾಗಲೇ ಟೆನ್ನಿಸ್, ಗಾಲ್ಫ್ ಸೇರಿದಂತೆ ಹಲವು ಕ್ರೀಡೆಗಳನ್ನು ರಾಜ್ಯಮಟ್ಟದಲ್ಲಿ ಆಯೋಜಿಸುತ್ತ ಬಂದಿದೆ. ಈ ಬಾರಿ ಶಿವಮೊಗ್ಗದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಸಂಘ ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 180 ಕ್ಕೂ ಹೆಚ್ಚು ಸದಸ್ಯರು ಸದಸ್ಯತ್ವ ಪಡೆದಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಾ. ಸಾತ್ವಿಕ್, ಕಾರ್ಯದರ್ಶಿ ಡಾ. ಜಯಭಾರತ ರೆಡ್ಡಿ, ಪದಾಧಿಕಾರಿಗಳಾದ ಡಾ. ವಿಕ್ರಮ್.ಎಸ್, ಡಾ.ನಟರಾಜ್, ಡಾ. ವಿಶ್ವಾಸ್.ಟಿ.ಡಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಾ. ಭರತ್.ಎಸ್.ವಿ, ಸಂಘದ ರಾಜ್ಯಾಧ್ಯಕ್ಷ
ದಂತ ವೈದ್ಯರನ್ನು ಪ್ರಧಾನವಾಗಿಟ್ಟುಕೊಂಡ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಮೂರು ಮಹಿಳಾ ತಂಡಗಳು ಸೇರಿದಂತೆ ಒಟ್ಟು 18 ಕ್ರಿಕೆಟ್ ತಂಡಗಳು ಇದರಲ್ಲಿ ಭಾಗವಹಿಸಲಿವೆ.