ದಾವಣಗೆರೆ : ದಾವಣಗೆರೆ ರಾಮನಗರದ ಎಸ್ಒಜಿ ಕಾಲೋನಿ ಮನೆಯಲ್ಲಿ ಮಂಗಳವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದು ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಡಾ. ವೆಂಕಟೇಶ್.ಎಂ.ವಿ ಅವರು ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಒಟ್ಟು 5 ಜನರು ಚಿಕಿತ್ಸೆ ಪಡೆಯುತ್ತಿದ್ದು, ವಿಶೇಷ ತಜ್ಞ ವೈದ್ಯರು ನಿಗಾವಹಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಗಾಯಾಳುಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲಾ ಚಿಕಿತ್ಸೆ ನೀಡಲು ತಿಳಿಸಿದರು.
ಒಟ್ಟು ಐದು ಜನರಲ್ಲಿ ಲಲಿತಮ್ಮ ಇವರಿಗೆ ಹೆಚ್ಚಿನ ಗಾಯವಾಗಿದೆ, ಸೌಭಾಗ್ಯ, ಪಾರ್ವತಮ್ಮ ಇವರಿಗೆ ಶೇ.50 ಕ್ಕಿಂತ ಹೆಚ್ಚು ಗಾಯವಾಗಿದೆ. ಉಳಿದ ಇಬ್ಬರಿಗೆ ಶೇ.50 ಕ್ಕಿಂತ ಕಡಿಮೆ ಇದೆ. ಗಾಯವು ನಂಜಾಗದಂತೆ ನೋಡಿಕೊಂಡು ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಗುಣಮುಖರಾಗುವಂತೆ ನೋಡಿಕೊಳ್ಳಲು ತಿಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಅವರು ಗಾಯಾಳುಗಳ ನಿಗಾವಹಿಸಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಚಿಗಟೇರಿ ಆಸ್ಪತ್ರೆ ಸರ್ಜನ್ ಡಾ. ನಾಗೇಂದ್ರಪ್ಪ ಹಾಗೂ ಎಸ್.ಎಸ್.ಹೈಟೆಕ್ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.
………………………….
ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಇಲ್ಲಿನ ದಾವಣಗೆರೆಯ ರಾಮನಗರದ ಎಸ್ಓಜಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿತ್ತು.
ಮಲ್ಲೇಶಪ್ಪ (60) ಲಲಿತಮ್ಮ (50) ಸೌಭಾಗ್ಯ, (36) ಪಾರ್ವತಮ್ಮ(45) ಪ್ರವೀಣ್ (35) ಗಾಯಗೊಂಡವರು. ಮಲ್ಲೇಶಪ್ಪ, ಲಲಿತಮ್ಮ ದಂಪತಿ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಗಾಯಗೊಂಡವರಲ್ಲಿ ಸೌಭಾಗ್ಯ, ಪಾರ್ವತಮ್ಮ, ಪ್ರವೀಣ್ ಪಕ್ಕದ ಮನೆಯವರು ಎಂದು ತಿಳಿದು ಬಂದಿದೆ.
ಮಲ್ಲೇಶಪ್ಪ ಲಲಿತಮ್ಮ ದಂಪತಿ ಅಡುಗೆ ಅನಿಲ ಸೋರಿಕೆ ಬಗ್ಗೆ ಪಕ್ಕದ ಮನೆಯ ನಿವಾಸಿಗಳಾದ ಸೌಭಾಗ್ಯ, ಪಾರ್ವತಮ್ಮ, ಪ್ರವೀಣ್ ಗಮನಕ್ಕೆ ತಂದಿದ್ದಾರೆ. ಅನಿಲ ಸೋರಿಕೆ ತಡೆಗಟ್ಟುವುದು ಅವರಿಗೆ ಗೊತ್ತಾಗಿಲ್ಲ. ಇದೇ ವೇಳೆ ಲೈಟ್ ಆನ್ ಮಾಡಿದ್ದೇ ತಡ ಸಿಲಿಂಡರ್ ಬ್ಲಾಸ್ಟ್ ಆಗಿ ಅವಘಡ ಸಂಭವಿಸಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ಎರಡು ಮನೆಗಳಿಗೆ ಹಾನಿಯಾಗಿದೆ. ಸ್ಫೋಟದ ಶಬ್ದಕ್ಕೆ ಇಡೀ ಎಸ್ಓಜಿ ಕಾಲೋನಿ ಜನ ಬೆಚ್ಚಿಬಿದ್ದಿದ್ದಾರೆ. ಮಲ್ಲೇಶಪ್ಪ, ಲಲಿತಮ್ಮ, ಸೌಭಾಗ್ಯ, ಪಾರ್ವತಮ್ಮ ಒಟ್ಟು ನಾಲ್ವರಿಗೆ ಶೇ 70 ರಷ್ಟು ಸುಟ್ಟ ಗಾಯಗಳಾಗಿವೆ. ಪ್ರವೀಣ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.