
ಶಿವಮೊಗ್ಗ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏ.24, 25 ರಂದು ಆಧುನಿಕ ಯುಗದ ತಂತ್ರಜ್ಞಾನ ಕ್ಷೇತ್ರದಲ್ಲಿ ಆರೋಗ್ಯ ಮತ್ತು ತಾಂತ್ರಿಕ ವಿಜ್ಞಾನ ಎಂಬ ವಿಷಯ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದ ಎಂದು ಕಾಲೇಜಿನ ನಿರ್ದೇಶಕ ಡಾ. ನಾಗರಾಜ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದಲ್ಲಿ ಮಂಡಿಸಲು ಈಗಾಗಲೇ 1487 ಪ್ರಬಂಧಗಳು ಸಲ್ಲಿಕೆಯಾಗಿವೆ. 280 ಪ್ರಬಂಧಗಳನ್ನು ಸ್ವೀಕರಿಸಲಾಗಿದೆ. 188 ಪ್ರಬಂಧಗಳು ಪ್ರಸ್ತುತಿಗಾಗಿ ನೋಂದಾಯಿಸಲ್ಪಟ್ಟಿವೆ. ಚೀನಾ, ಪೆರು, ಯುಎಸ್ಎ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಂದ 19 ವಿದೇಶಿ ಪ್ರಬಂಧಗಳು ಆಯ್ಕೆಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮಲೇಷ್ಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವ್ಯಾನ್ ಖೈರೋನಿಜಮ್ ಅವರು ಉದ್ಘಾಟಿಸಲಿದ್ದು, ಪಿಇಎಸ್ ಟ್ರಸ್ಟ್ ನ ಸುಭಾಷ್ ಬಿ.ಆರ್. ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಡಾ.ಎಸ್.ವಿ.ಸತ್ಯನಾರಾಯಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೇ, ದುಬೈನ ಜೈ ಪ್ರಕಾಶ್ ಸೋನಿ, ಬೆಂಗಳೂರಿನ ಸುನಿಲ್ ಕುಮಾರ್, ಸುಬೆಕ್ಸ್ ನ ಶ್ರೀನಿಧಿ ಸುರೇಶ, ವಿಷಯ ಪರಿಣಿತರಾಗಿ ಆಗಮಿಸುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ನಾಗರಾಜ್, ಡಾ. ಶೇಖರ್, ಡಾ. ಪ್ರಸನ್ನ, ಡಾ. ಥಾಮಸ್ ಇದ್ದರು.