ಭದ್ರಾವತಿ : ಭಾರತವನ್ನು ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿಸುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಬೇಕು. ಇದನ್ನು ಸಾಧಿಸುವ ಮಹತ್ತರವಾದ ಜವಾಬ್ದಾರಿ ಇಂದಿನ ನೂತನ ಅಧಿಕಾರಿಗಳ ಮೇಲಿದೆ ಎಂದು ಎಂ ಎಲ್ ಸಿ ಡಿ.ಎಸ್.ಅರುಣ್ ಹೇಳಿದರು.
ಅವರು ನಗರದ ನ್ಯೂಟನ್ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್ ನಿಂದ ಯು ಪಿ ಎಸ್ ಸಿ ಯಲ್ಲಿ ರ್ಯಾಂಕ್ ಪಡೆದ ಜಿಲ್ಲೆಯ ಸಾಧಕರಿಗೆ ಏರ್ಪಡಿಸಿದ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತರಿಗೆ ಸೂಕ್ತ ಸ್ಥಾನಮಾನ ಅಧಿಕಾರ ದೊರೆಯಬೇಕು. ಇಲ್ಲದಿದ್ದರೆ ಅವರು ವಿದ್ಯೆಗೆ ಅರ್ಹವಾದ ಸ್ಥಾನಮಾನ ಅಧಿಕಾರ ಅರಸಿಕೊಂಡು ವಿದೇಶಗಳಿಗೆ ಪಲಾಯನ ಮಾಡುತ್ತಾರೆ. ಇಂತಹ ಪ್ರತಿಭೆಗಳು ಪಲಾಯನ ಮಾಡುವುದು ದೇಶಕ್ಕೆ ನಷ್ಟವಾಗುತ್ತದೆ.
ಕಾಲ ಎಂಬುವುದು ಯಾವಾಗಲೂ ಎಲ್ಲ ಕಾಲದಲ್ಲೂ ಚೆನ್ನಾಗಿರುತ್ತದೆ. ಆದರೆ ಅದರಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಬೇಕು. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಕೊಡುಗೆಗಳನ್ನು ಕೊಡುವಲ್ಲಿ ನಮ್ಮ ಪಾತ್ರ ಬಹಳಷ್ಟಿದೆ ಎಂಬುದನ್ನು ಮರೆಯಬಾರದು. ಇಂದು ಸಮಾಜದಲ್ಲಿ ಜ್ಞಾನ ಮತ್ತು ಸಂಸ್ಕಾರಗಳು ಬಹು ಮುಖ್ಯವಾದವು. ಕೇವಲ ಜ್ಞಾನ ಹೊಂದಿದ್ದರೆ ಸಾಲದು ಅದಕ್ಕೆ ತಕ್ಕ ಸಂಸ್ಕಾರಗಳು ಇರಬೇಕು. ಆಗ ಮಾತ್ರ ಅಂತಹ ಜ್ಞಾನಕ್ಕೆ ಮಹತ್ವ ಇರುತ್ತದೆ. ಅಂತಹ ಸಂಸ್ಕಾರಗಳು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ.
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳ ಪಾತ್ರ ಬಹುಮುಖ್ಯವಾಗಿದೆ. ಇವುಗಳಲ್ಲಿ ಪಾರದರ್ಶಕತೆಯನ್ನು ತರಬೇಕಾಗಿದೆ. ಆಗ ಎಲ್ಲ ರೀತಿಯ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತದೆ. ಇದಕ್ಕೆ ನಮ್ಮ ದೇಶದ ಸಂವಿಧಾನವೇ ಅಡಿಪಾಯ. ಸರ್ಕಾರದ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯುತ ನಾಗರೀಕರ ಪಾತ್ರವು ಬಹಳಷ್ಟಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಕೇಂದ್ರ ಸರ್ಕಾರದ ನಾಗರಿಕ ಸೇವೆಗೆ ಆಯ್ಕೆಯಾದ ಮಾದೇಹಳ್ಳಿಯ ಡಾ. ದಯಾನಂದ್ ಸಾಗರ್, ಶಿವಮೊಗ್ಗದ ಬಿ.ಎಂ.ಮೇಘನಾ, ಸಾಗರದ ಡಿ.ವಿಕಾಸ್ ಅವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಶೈಲೇಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ನಿರಂಜನ್, ಸಹಾಯಕ ಜಿಲ್ಲಾ ರಾಜ್ಯಪಾಲ ನಾಗರಾಜ್, ಲೀಲಾವತಿ ಸುಧಾಕರ ಶೆಟ್ಟಿ, ಹೆಚ್.ವಿ.ಆದರ್ಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧಕರು ಸಭಿಕರೊಂದಿಗೆ ಸಾಧನೆಯ ತಯಾರಿ ಕುರಿತು ಅನುಭವಗಳನ್ನು ಹಂಚಿಕೊಂಡರು. ನಂತರ ಸಂವಾದ ನಡೆದು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಪರೀಕ್ಷೆ ಎದುರಿಸಿದ ರೀತಿ, ಪೂರ್ವ ತಯಾರಿ, ಮಾರ್ಗದರ್ಶನ ನೀಡಿದವರು, ವಿದ್ಯಾಭ್ಯಾಸಕ್ಕಾದ ಖರ್ಚು ವೆಚ್ಚಗಳು, ಪರಿಪಾಟಲು, ಅನುಭವಿಸಿದ ಯಾತನೆ ಎಲ್ಲವನ್ನು ಹಂಚಿಕೊಂಡರು.
ಸಭೆಯಲ್ಲಿ ನಾಣ್ಯ ಹಾಗೂ ನೋಟುಗಳ ಸಂಗ್ರಹಕ ಕೆ.ಎಸ್.ಗಣೇಶ್ ಅವರು ಪ್ರತಿಭಾವಂತರ ಜನ್ಮದಿನದ ನೋಟುಗಳನ್ನು ನೀಡಿ ಗೌರವಿಸಿದರು. ಆರ್.ಶುಭ ಪ್ರಾರ್ಥಿಸಿದರೆ, ಕೆ.ಹೆಚ್.ತೀರ್ಥಯ್ಯ ಸ್ವಾಗತಿಸಿದರು. ಗೀತಾ ಬೆಂಗಳೂರು ವಂದಿಸಿದರು. ಶ್ರೀನಿವಾಸ್ ಅತಿಥಿ ಪರಿಚಯ ಮಾಡಿದರು. ಡಾ. ಮಯೂರಿ ಮಲ್ಲಿಕಾರ್ಜುನ ಜ್ಯೋತಿ ನಿರೂಪಿಸಿದರು.